ಪೆರ್ಲದಲ್ಲಿ ರಿಕ್ಷಾ ಚಾಲಕರಿಗೆ ಉಚಿತ ಪೆಟ್ರೊಲ್/ಡಿಸೇಲ್ ವಿತರಣೆ| ಲಾಕ್ ಡೌನ್ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಅಬ್ದುಲ್ಲ ಮಾದುಮೂಲೆಯವರಿಂದ ವಿನೂತನ ಸಹಾಯ


ಪೆರ್ಲ: ಕೋರೋನ ಮಹಾಮಾರಿಯಿಂದ ಲೋಕವೇ ತತ್ತರಿಸಿದ ಸಂದರ್ಭದಲ್ಲಿ ಲಾಕ್ ಡೌನ್ ಘೊಷಿಸಿದಾಗ ಸಂಕಷ್ಟಕ್ಕೀಡಾದವರ ಸಹಾಯಕ್ಕೆ ಸಮರೋಪಾದಿ ಕಾರ್ಯಗಳು ನಡೆದವು. ಹಲವಾರು ಸಂಘಟನೆಗಳು, ಸಹೃದಯಿಗಳು,ಕೊಡುಗೈ ದಾನಿಗಳು ಸಂತ್ರಸ್ತರ ನೆರವಿಗೆ ಬಂದರು. ಆದರೆ ಇದೇ ಸಂದರ್ಭಕ್ಕನುಗುಣವಾಗಿ ಇಲ್ಲೊಬ್ಬರು ದುಬೈ ಉದ್ಯೋಗಿ ತನ್ನ ಮಾಲೀಕತ್ವದಲ್ಲಿರುವ ಊರಿನ ಪೆಟ್ರೊಲ್ ಬಂಕ್ ಮೂಲಕ ರಿಕ್ಷಾ ಚಾಲಕರಿಗೆ ಉಚಿತ ಪೆಟ್ರೊಲ್/ಡಿಸೇಲ್ ವಿತರಿಸುವ ಮೂಲಕ ರಿಕ್ಷಾ ಚಾಲಕರಿಗೆ ತಮ್ಮ ಕೈಲಾದ ಕೊಡುಗೆ ನೀಡುವುದರೊಂದಿಗೆ ಮಾದರಿಯಾಗಿದ್ದಾರೆ. 


ಪೆರ್ಲ ಪೇಟೆ ಸಮೀಪದ ಪೆರ್ಲದಿಂದ ವಿಟ್ಲಕ್ಕೆ ತೆರಳುವ ರಸ್ತೆಯಲಿರುವ ಕುದುಕ್ಕೋಳಿ ಪೆಟ್ರೋಲ್ ಪಂಪ್ ನಲ್ಲಿ  ಸೋಮವಾರ (ಇಂದು) ಪ್ರತಿ ರಿಕ್ಷಾಗಳಿಗೂ ತಲಾ ಮೂರು ಲೀಟರ್ ನಂತೆ ಇಂಧನ ವಿತರಿಸಲಾಯಿತು. ಈ ವಿನೂತನ ಘೋಷಣೆಯನ್ನು ತಿಳಿದು ಪಂಪ್ ಗೆ ಆಗಮಿಸಿದ ಕೇವಲ ಪೆರ್ಲ,ಎಣ್ಮಕಜೆ ಗ್ರಾಮ ಪಂಚಯತ್ ವ್ಯಾಪ್ತಿಯ ಮಾತ್ರವಲ್ಲದೆ ನೆರೆಯ ಕರ್ನಾಟಕದಿಂದ ಬಂದ ರಿಕ್ಷಾಗಳಿಗೂ ಉಚಿತ ಇಂಧನ ವಿತರಿಸಲಾಗಿತ್ತು. 


ಅಬುದಾಭಿಯಲ್ಲಿ ಉದ್ಯೋಗಿಯಾಗಿರುವ ಅಬ್ದುಲ್ಲ ಮಾದುಮೂಲೆ ಎಂಬವರೇ ಈ ಲಾಕ್ ಡೌನ್ ಕಾಲಘಟ್ಟದಲ್ಲಿ ರಿಕ್ಷಾ ಡ್ರೈವರ್ ಗಳಿಗೆ ವರದಾನವಾದ ವ್ಯಕ್ತಿಯಾಗಿದ್ದಾರೆ. 


2021ಜನವರಿ 4 ರಂದು ಇಲ್ಲಿ ನವೀಕೃತ ಕುದುಕ್ಕೋಳಿ ಪೆಟ್ರೋಲ್ ಪಂಪ್ ನ್ನು ಆರಂಭಿಸಿದ ಅಬ್ದುಲ್ಲ ಮಾದುಮೂಲೆ ಅವರು ಆರಂಭ ಹಂತದಲ್ಲಿಯೇ ವಿಶೇಷ ಆಫರ್ ನೀಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಇಂಧನ ಬೆಲೆ ಗಗನಕ್ಕೇರುವ ಜತೆಗೆ ಅನೀರಿಕ್ಷಿತವಾಗಿ ಘೊಷಿಸಿದ ಲಾಕ್ ಡೌನ್ ನಿಂದಾಗಿ ಪೆರ್ಲದಂತಹ ಚಿಕ್ಕ ಪೇಟೆಯಲ್ಲಿದ್ದ ಹಲವಾರು ರಿಕ್ಷಾ ಚಾಲಕರು ಬಾಡಿಗೆ ಮಾಡಲಾಗದೆ ಹಾಗೂ ಬಾಡಿಗೆ ಇಲ್ಲದೆ ನಿಸ್ಸಹಾಯಕರಾಗಿದ್ದರು.ಈ ಸಂದರ್ಭದಲ್ಲಿ ಉಚಿತ ಇಂಧನ ನೀಡುವ ವಿನೂತನ ಸಹಾಯ ನೀಡಲು ಮನಸ್ಸು ಮಾಡಿದ ಬಗ್ಗೆ "ವಿಶೇಷ ಚಾನೆಲ್" ನ ಯುಎಇ ಪ್ರತಿನಿಧಿ ವಿಜಯ ಕುಮಾರ್ ಶೆಟ್ಟಿ ಅವರು ಅಬ್ದುಲ್ ಮಾದುಮೂಲೆಯವರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಿದ್ದರು.  

ಅಬ್ದುಲ್ಲ ಅವರ ಅಭಿಪ್ರಾಯ : "ನನ್ನ ಊರಾದ ಪೆರ್ಲದಲ್ಲಿ ಪೆಟ್ರೋಲ್ ಪಂಪ್ ಆರಂಭಿಸಿರುವುದು ಕೇವಲ ವ್ಯಾಪಾರೀಕರಣ ದೃಷ್ಠಿಕೋನದಿಂದ ಮಾತ್ರ ಅಲ್ಲ. ಬದಲಾಗಿ ಅಲ್ಲಿನವರ ಕಷ್ಟ ಸುಖಗಳೊಂದಿಗೆ ಪಾಲ್ಗೊಳ್ಳುವ ಜತೆಗೆ ಜನರಿಗೆ ಪ್ರಯೋಜನವಾಗುವಂತಾಗಬೇಕೆಂಬ ಉದ್ದೇಶದಿಂದಾಗಿದೆ. ಪೆಟ್ರೋಲ್ ಪಂಪ್ ಹೆಚ್ಚಿನ ಎಲ್ಲ ಪೇಟೆಗಳಲ್ಲಿ ಇದೆ. ಆದರೆ ಅದಕ್ಕಿಂತ ಭಿನ್ನವಾಗಿ ಇದರ ಕಾರ್ಯ ವೈಖರಿಯನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಪೆಟ್ರೋಲ್ ಬಂಕ್ ನಲ್ಲಿ ಇಂಧನದ ಗುಣಮಟ್ಟತೆ, ಸ್ವಚ್ಛತೆ ಹಾಗೂ ಸರ್ವೀಸ್ ಹೀಗೆ ಪ್ರಾಮುಖ್ಯತೆ ಕಾಯ್ದುಕೊಂಡು ಬರಲಾಗಿದೆ.ಪ್ರತಿನಿತ್ಯವೂ ಈ ಪಂಪಿನ ಕಾರ್ಯಚರಣೆಯನ್ನು ಅಬುಧಾಬಿಯಲಿ ಕುಳಿತು ವೆಬ್ ಕ್ಯಾಮರ ಮೂಲಕ ನೋಡಲಾಗುತ್ತದೆ. ಹೀಗೆ ಇರುವ ಸಂದರ್ಭದಲ್ಲಿ ಕೆಲವು ಆಟೋಗಳು ಪಂಪ್ ಗೆ ಬಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುವುದು ಗಮನಕ್ಕೆ ಬಂತು. ತಕ್ಷಣ ಅವರ ಬಗ್ಗೆ ಕನಿಕರ ಬಂದು ಇಂತಹವರಿಗೆ ನಮ್ಮ ಕೈಲಾದ ಸಹಾಯ ನೀಡಬೇಕೆಂಬ ಉದ್ದೇಶದಿಂದ ಉಚಿತ ಇಂಧನ ನೀಡುವ ಬಗ್ಗೆ ಫೆಸ್ ಬುಕ್ ನಲ್ಲಿ ಅಭಿಪ್ರಾಯ ಪ್ರಕಟಿಸಿದೆ. ಇದಕ್ಕೆ ಉತ್ತಮ ಸ್ಪಂದನೆಯೂ ಲಭಿಸಿತು. ಆಟೋ ಚಾಲಕರಿಗೆ ಇದು ಕಿಂಚಿತ್ ಸಹಾಯವಾಗಿದೆ ಎಂದು ಭಾವಿಸುತ್ತೇನೆ" ಎಂದರು.



Post a Comment

0 Comments