ಯುಎಇ: ಅಕ್ಷರ ಸಂತ ಎಂದೇ ಪ್ರಖ್ಯಾತರಾಗಿರುವ ಪದ್ಮ ಶ್ರೀ ಹರೇಕಳ ಹಾಜಬ್ಬರವರು ದುಬೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದಾಗ ದುಬೈಯ ಬ್ಯಾರೀಸ್ ಕಲ್ಚರಲ್ ಫೋರಮ್ ( BCF ) ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಬಿ.ಸಿ.ಎಫ್ ನ ಅಧ್ಯಕ್ಷರಾದ ಡಾ ಬಿ ಕೆ ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಬಿ.ಸಿ.ಎಫ್ ನ ಇದರ ಎಲ್ಲಾ ನಾಯಕರೂ, ಪದಾಧಿಕಾರಿಗಳೂ, ಬಿ.ಸಿ.ಎಫ್ ನ ಮಹಿಳಾ ಮಂಡಳಿಯ ಪದಾಧಿಕಾರಿಗಳೂ ಹಾಗೂ ಇತರ ಸದಸ್ಯರೂ ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತ ಗೌರವಾನ್ವಿತ ಅಥಿತಿಗಳಾಗಿ ಬಿ.ಸಿ.ಎಫ್ ನ ಗೌರವ ಪೋಷಕರೂ, ಕರ್ನಾಟಕ ಮುಸ್ಲಿಂ ಜಮಾತ್ ಇದರ ಉಪಾಧ್ಯಕ್ಷರೂ, ಕರ್ನಾಟಕದ ಮುಸ್ಲಿಂ ಸಮುದಾಯದ ಜನಪ್ರಿಯ ಮುಂದಾಳುವೂ ಆದ ಜನಾಬ್ ಮುಮ್ತಾಜ್ ಅಲಿ, ನಫೀಸ್ ಗ್ರೂಪ್ ದುಬೈ ಇದರ ವ್ಯವಸ್ಥಾಪಕರಾದ ಜನಾಬ್ ಅಬು ಸಾಲಿಹ್, ಗಡಿಯಾರ್ ಗ್ರೂಪ್ ದುಬೈ ಇದರ ವ್ಯವಸ್ಥಾಪಕರಾದ ಜನಾಬ್ ಇಬ್ರಾಹಿಂ ಗಡಿಯಾರ, ಉದ್ಯಮಿ ಜನಾಬ್ ನವೀದ್ ಜಾನ್,ಮೊದಲಾದ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಹಲವಾರು ಸಮಾಜ ಸೇವಾ ಸಂಸ್ಥೆಗಳ ಪ್ರತಿನಿಧಿಗಳಾದ ಕೆ.ಸಿ.ಎಫ್.ನ ನೇತಾರರಾದ ಜನಾಬ್ ಖಾದರ್ ಸಾಲೆತ್ತೂರ್, ಜನಾಬ್ ಝಯಿನುದ್ದೀನ್ ಬೆಳ್ಳಾರೆ, ಜನಾಬ್ ಮೂಸ ಬಸರ ಹಾಗೂ ಡಿ.ಕೆ.ಎಸ್.ಸಿ. ಇದರ ನೇತರಾದ ಜನಾಬ್ ಅಬ್ದುಲ್ ರಹಿಮಾನ್ ಸಜಿಪ, ಜನಾಬ್ ಯೂಸುಫ್ ಅರ್ಲಪದವು, ಜನಾಬ್ ಇಬ್ರಾಹಿಂ ಕಿನ್ಯ,ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಡಿ.ಕೆ.ಎಸ್.ಸಿ ಯ ಪದಾಧಿಕಾರಿಯಾದ ಜನಾಬ್ ತಿಂಗಳಾಡಿ ಅಬ್ದುಲ್ ಲತೀಫ್ ರವರ ಕಿರಾತ್ ನೊಂದಿಗೆ ಪ್ರಾರಂಭವಾದ ಸಭೆಗೆ ಬಿ.ಸಿ.ಎಫ್ ನ ಪ್ರಧಾನ ಕಾರ್ಯದರ್ಶಿಗಳಾದ ಡಾಕ್ಟರ್ ಪ್ರೊಫೆಸರ್ ಕಾಪು ಮೊಹಮದ್ ರವರು ಅತಿಥಿಗಳನ್ನು ಆಹ್ವಾನಿಸಿದರು.
ಬಿ.ಸಿ.ಎಫ್.ನ ಉಪಾಧ್ಯಕ್ಷರಾದ ಜನಾಬ್ ಎಂ ಈ ಮೂಳುರ್ ರವರು ಬಿ.ಸಿ.ಎಫ್.ನ ಸಂಸ್ಥೆಯ ಸ್ಥೂಲ ಪರಿಚಯವನ್ನು ನೀಡುವುದರೊಂದಿಗೆ ಸಂಸ್ಥೆಯ ಧ್ಯೇಯೋಧ್ಯೆಶ ಹಾಗೂ ಸಾಧನೆಗಳನ್ನು ವಿವರಿಸಿದರು.
ಅಧ್ಯಕ್ಷರಾದ ಡಾ ಬಿ ಕೆ ಯೂಸುಫ್ ರವರು ಬಿ.ಸಿ.ಎಫ್. ನ ಸಂಕ್ಷಿಪ್ತ ಪರಿಚಯವನ್ನು ನೀಡಿದರು ಹಾಗೂ ಕರ್ನಾಟಕದ ಹೆಮ್ಮೆಯಾದ ಪದ್ಮಶ್ರೀ ಹಾಜಬ್ಬರವರ ವ್ಯಕ್ತಿತ್ವದ ಔನ್ನತ್ಯವನ್ನು ಒತ್ತಿ ಹೇಳುತ್ತಾ ಅಕ್ಷರ ಸಂತನನ್ನು ಮನಸಾರೆ ಪ್ರಶಂಸಿದರು.
ಬಿ.ಸಿ.ಎಫ್.ನ ಗೌರವ ಪೋಷಕ ರಾದ ಜನಾಬ್ ಮುಮ್ತಾಜ್ ಅಲಿಯವರು ಬಿ.ಸಿ.ಎಫ್ ಹಾಗೂ ಅವರಿಗಿರುವ ಅವಿನಾಭಾವವಾದ ಭಾಂಧವ್ಯವನ್ನು ಉಲ್ಲೇಖಿಸುತ್ತಾ ಬಿ.ಸಿ.ಎಫ್ ಸಂಸ್ಥೆಯ ಸಾಧನೆ ಗಳನ್ನೂ ಕೂಲಂಕಷವಾಗಿ ಪ್ರಸ್ತುತ ಪಡಿಸಿದರು. ಹಾಗೂ ಪದ್ಮಶ್ರೀ ಹಾಜಬ್ಬ ರವರ ನಿಕಟವರ್ತಿಯಾಗಿ ಅವರು ವಿದ್ಯಾ ಕ್ಷೇತ್ರದಲ್ಲಿ ಮಾಡಿದ ಅಮೋಘ ಸೇವೆ, ಅವರ ವ್ಯಕ್ತಿ ವಿಶೇಷತೆ , ಸರಳತೆ ಮತ್ತು ಸಮರ್ಪಣಾ ಭಾವದ ಪರಿಚಯ ನೀಡಿದರು.
ಸಮಾರಂಭದ ಕೇಂದ್ರ ಬಿಂದು ಪದ್ಮಶ್ರೀ ಹರೇಕಳ ಹಾಜಬ್ಬನವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಂಗಳೂರಿನ ಪೇಟೆಯ ದಾರಿ ಬದಿಯಲ್ಲಿ ಮುಸುಂಬಿ ಮಾರುತ್ತಾ ಕಾಡು ಬಡವನಾಗಿ ಬದುಕುತ್ತಿದ್ದ ತನಗೆ ವಿದ್ಯೆಯ ಮಹತ್ವ ಅರಿವಾಗಿ, ತಾನು ವಿದ್ಯೆಯ ಕೊರತೆಯಿಂದಾಗಿ ಬಳಲುತ್ತಿರುವಂತೆ ತನ್ನ ಹಳ್ಳಿಯ ಜನರ ಮಕ್ಕಳು ಕಷ್ಟಕ್ಕೆ ಸಿಲುಕಬಾರದು ಎಂಬ ಏಕೈಕ ಉದ್ಧೇಶದಿಂದ ದೇವರ ಮೇಲೆ ಭಾರ ಹಾಕಿ ಒಂದು ಶಾಲೆಯನ್ನು ಸ್ಥಾಪಿಸುವಂತಹ ಭಗೀರಥ ಪ್ರಯತ್ನಕ್ಕೆ ಕೈಹಾಕಿ ಮುಂದೆ ನಡೆದ ಐತಿಹಾಸಿಕ ಬೆಳವಣಿಗೆಯ ಬಗ್ಗೆ ತನ್ನ ಅತ್ಯಂತ ಸರಳ ಭಾಷೆಯಲ್ಲಿ ವಿವರಿಸಿದರು. ಅವರ ಮುಗ್ಧವಾದ ನೇರವಾದ ಭಾಷ ಶೈಲಿಯು ಸಭಿಕರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು.
ಮುಖ್ಯ ಅತಿಥಿಗಳಾದ ಜನಾಬ್ ಇಬ್ರಾಹಿಂ ಗಡಿಯಾರ್, ಕೆ.ಸಿ.ಎಫ್.ನ ನಾಯಕರಾದ ಜನಾಬ್ ಖಾದರ್ ಸಾಲೆತ್ತೂರು , ಡಿ.ಕೆ.ಎಸ್.ಸಿ.ನ ನಾಯಕರಾದ ಜನಾಬ್ ಯೂಸುಫ್ ಅರ್ಲಪದವು, ಮೊದಲಾದ ವರು ಸಂಧರ್ಬೋಚಿತವಾಗಿ ಮಾತನಾಡಿದರು.
ಈ ಸಂಧರ್ಭದಲ್ಲಿಪದ್ಮಶ್ರೀ ಹಾಜಬ್ಬರವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಹಾಗೂ ಬಿ.ಸಿ.ಎಫ್ ನ ಗೌರವ ಪೋಷಕರಾದ ಜನಾಬ್ ಮುಮ್ತಾಜ್ ಅಲಿ ಯವರನ್ನೂ ಸ್ಮರಣಿಕೆ ನೀಡಿ ಹೃತ್ಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಸಿ.ಎಫ್ ವತಿಯಿಂದ ಬಿ.ಸಿ.ಎಫ್.ನ ಅಧ್ಯಕ್ಷರಾದ ಡಾ ಬಿ ಕೆ ಯೂಸುಫ್ ರವರನ್ನು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಡಾ ಕಾಪು ಮೊಹಮ್ಮದ್ ರವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಬಿ.ಸಿ.ಎಫ್.ನ ಉಪಾಧ್ಯಕ್ಷ ಜನಾಬ್ ಅಬ್ದುಲ್ ಲತೀಫ್ ಮುಲ್ಕಿಯವರು ವಂದಿಸಿದರು.

0 Comments