ವಿಶ್ವದ ಅತಿದೊಡ್ಡ ಕನ್ನಡ ಕಲಿಕಾ ಕೇಂದ್ರವಾದ ಕನ್ನಡ ಪಾಠಶಾಲೆ , ದುಬೈಯ 8 ನೇ ವರ್ಷದ ಶೈಕ್ಷಣಿಕ ಸಮಾರೋಪ ಸಮಾರಂಭ


ದುಬೈ: ಕನ್ನಡ ಮಿತ್ರರು ಯುಎಇ ಸಂಘಟನೆ , ನಡೆಸುತ್ತಿರುವ  ವಿಶ್ವದ ಅತಿದೊಡ್ಡ ಕನ್ನಡ ಕಲಿಕಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ  ಕನ್ನಡ ಪಾಠಶಾಲೆ , ದುಬೈ - ಇವರ 8 ನೇ  ವರ್ಷದ ಶೈಕ್ಷಣಿಕ ಸಮಾರೋಪ ಸಮಾರಂಭ  ಏಪ್ರಿಲ್ 24 ರ ಭಾನುವಾರ  ಆನ್ಲೈನ್ ಮುಖಾಂತರ  ನಡೆಯಿತು . 


ಕಾರ್ಯಕ್ರಮದ ಅಧ್ಯಕ್ಷರಾಗಿ  ಶ್ರೀ. ಟಿ. ಎಸ್. ನಾಗಾಭರಣ , (ಮಾನ್ಯ ಅಧ್ಯಕ್ಷರು , ಕನ್ನಡ ಅಭಿವೃದ್ಧಿ ಪ್ರಾಧಿಕಾರ ) , ಗೌರವ ಅತಿಥಿಗಳಾಗಿ  ಶ್ರೀ.ವಿಶ್ವೇಶ್ವರ ಭಟ್ ( ಸಂಪಾದಕರು , ವಿಶ್ವವಾಣಿ  ಪತ್ರಿಕೆ ) ,  ವಿಶೇಷ ಅತಿಥಿಗಳಾಗಿ ಶ್ರೀ ಹಿರೇಮಗಳೂರ್  ಕಣ್ಣನ್ ( ಖ್ಯಾತ ವಾಗ್ಮಿಗಳು ) ಮತ್ತು ಶ್ರೀಮತಿ ನಾಗಶ್ರೀ ತ್ಯಾಗರಾಜ್ ( ಉಪನ್ಯಾಸಕರು )
 ಪ್ರವೀಣ್ ಶೆಟ್ಟಿ ( ಮಾನ್ಯ ಅಧ್ಯಕ್ಷರು , ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ) ಹಾಗೂ ಶ್ರೀ. ಮೋಹನ್ ನರಸಿಂಹ ಮೂರ್ತಿ ( ಮಾನ್ಯ ಉಪಾಧ್ಯಕ್ಷರು , ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ) ಪಾಲ್ಗೊಂಡಿದ್ದರು .


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ  ಶ್ರೀ. ಟಿ. ಎಸ್. ನಾಗಾಭರಣರವರು ದೂರದ ಅರಬ್ಬರ ನಾಡಿನಲ್ಲಿ ಕನ್ನಡ ಕಟ್ಟುವ ಕನ್ನಡ ಮಿತ್ರರ  ಪ್ರಯತ್ನವನ್ನು ಅಭಿನಂದಿಸುತ್ತಾ  , ಕನ್ನಡ ಮಿತ್ರರ ಭಾಷಾ  ಕಾಳಜಿಗೆ ಸಂತಸ  ವ್ಯಕ್ತ ಪಡಿಸಿದರು
.

ಮತ್ತೋರ್ವ ಮುಖ್ಯ ಅತಿಥಿಗಳಾದ  ಶ್ರೀ.ವಿಶ್ವೇಶ್ವರ  ಭಟ್ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ  ಕರ್ನಾಟಕದಲ್ಲೇ   ಮಾತೃ ಭಾಷಾ ತಾತ್ಸಾರ ಮತ್ತು ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದರ  ಬಗ್ಗೆ  ಬೇಸರ ವ್ಯಕ್ತಪಡಿಸುತ್ತಾ ,  ಒಂದು ಸರ್ಕಾರ / ಪ್ರಾಧಿಕಾರ ಮಾಡಬೇಕಾದ ಕಾರ್ಯವನ್ನು ಕನ್ನಡ ಮಿತ್ರರು ಸಂಘಟನೆ ಮಾಡುತ್ತಿರುವುದಕ್ಕೆ ಸಂತಸ  ವ್ಯಕ್ತಪಡಿಸಿದರು .  ಕನ್ನಡ ಮಿತ್ರರು ಯುಎಇ ನಡೆಸುತ್ತಿರುವ  , ಕನ್ನಡ ಪಾಠಶಾಲೆ , ದುಬೈನ ಮಾದರಿಯಲ್ಲಿಯೇ  ಕನ್ನಡ ಕಲಿಸುವ ಪ್ರಯತ್ನಗಳು  ಕರ್ನಾಟದಲ್ಲಿಯೇ  ಹೆಚ್ಛಾಗಿ  ನಡೆಯಬೇಕೆಂದು ಅಭಿಪ್ರಾಯಪಟ್ಟರು. 

ಕನ್ನಡದ ಪೂಜಾರಿ ಎಂದೇ ಎಲ್ಲರ ಮನೆ ಮಾತಾಗಿರುವ ಶ್ರೀ ಹಿರೇಮಗಳೂರ್ ಕಣ್ಣನ್ ಮತ್ತು ಉಪನ್ಯಾಸಕಿಯಾದ ಶ್ರೀಮತಿ ನಾಗಶ್ರೀ ತ್ಯಾಗರಾಜ್ ನಡೆಸಿಕೊಟ್ಟ ವಿಶೇಷ ಕಾರ್ಯಕ್ರಮ " ದಿನದಿನದ ಮಾತುಕತೆ ಚಂದನದ ತಂಪಂತೆ" ಎಂಬ ಎಲ್ಲರ ಗಮನ ಸೆಳೆಯಿತು .

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಮಿತ್ರರು ಸಂಘಟನೆ  ಹಾಗು ಕನ್ನಡ ಪಾಠಶಾಲೆ , ದುಬೈನ ಅಧ್ಯಕ್ಷರಾದ ಶ್ರೀ. ಶಶಿಧರ್ ನಾಗರಾಜಪ್ಪರವರು  , ಆನ್ ಲೈನ್ ತರಗತಿಗಳ ಮೂಲಕವೇ  ಕರೋನ ನಡುವೆಯೂ ಕನ್ನಡ ಕಲಿಸುವ 17 ಶಾಲಾ ಶಿಕ್ಷಕಿಯರ  ಬದ್ಧತೆಯನ್ನು ಪ್ರಶಂಶಿಸಿದರು ಈ ಕಾರ್ಯಕ್ರಮದಲ್ಲಿ ಪಾಠಶಾಲೆಯ ಎಲ್ಲ ನಿಸ್ವಾರ್ಥ ಶಿಕ್ಷಕಿಯರಿಗೆ ಗುರು ನಮನ ಸಲ್ಲಿಸಲಾಯಿತು ಹಾಗೂ ಈ ಬಾರಿ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು .

ಇದೆ ಸಮಾರಂಭದಲ್ಲಿ  ಕನ್ನಡ ಮಿತ್ರರು ಯುಎಇ ಸಂಘಟನೆಯ ಈ ಬಾರಿಯ  “ ಕನ್ನಡ ಮಿತ್ರ “  ಅಂತರರಾಷ್ಟ್ರೀಯ ಪ್ರಶಸ್ತಿಯನ್ನು  ಥಟ್ ಅಂತ ಹೇಳಿ  ಖ್ಯಾತಿಯ ಶ್ರೀ . ಡಾ. ನಾ . ಸೋಮೇಶ್ವರ್ ಮತ್ತು ಪ್ರಖ್ಯಾತ ಕನ್ನಡ ಸಾಹಿತಿಗಳಾದ ಶ್ರೀ . ಬೊಳುವಾರ್ ಮಹಮದ್ ಕುಂಇ  ಇವರಿಗೆ ನೀಡಿ ಪುರಸ್ಕರಿಸಲಾಯಿತು  

ಈ ಬಾರಿ ಕನ್ನಡ ಮಿತ್ರರು ಯುಎಇ ಸಂಘಟನೆಯ ಕಡಲಾಚೆಯಿಂ ಕರುನಾಡಿಗೆ ಯೋಜನೆಯಡಿ ಚತುರ ಶಾಲಾ  ಸಂವರ್ಧನೆಗೆ  ಆಯ್ಕೆಯಾದ 3  ಸರ್ಕಾರಿ  ಶಾಲೆಗಳನ್ನು ಘೋಷಿಸಲಾಯಿತು . 

ಕಾರ್ಯಕ್ರಮದಲ್ಲಿ  ಕನ್ನಡ ಮಿತ್ರರು ಯುಎಇ ಸಂಘಟನೆಯ  ಉಪಾಧ್ಯಕ್ಷರಾದ ಶ್ರೀ  ಸಿದ್ದಲಿಂಗೇಶ್ ಚತುರ ಶಾಲಾ ಯೋಜನೆ ಬಗ್ಗೆ ವಿವರಣೆ ನೀಡಿದರೆ , ಕಾರ್ಯದರ್ಶಿಗಳಾದ  ಶ್ರೀ ಸುನಿಲ್ ಗವಾಸ್ಕರ್ ಅವರು ತಂಡದ ತಂತ್ರಜ್ಞಾನ ವಿಭಾಗದ ಸೇವೆಯನ್ನು ಶ್ಲಾಘಿಸಿದರು ... ಮತ್ತು ಖಜಾಂಚಿಗಳಾದ  ಶ್ರೀ ನಾಗರಾಜ ರಾವ್ ರವರು  ಸಂಘಟನೆಯವರು ಕೈಗೊಂಡ ಉಡುಪಿಯ ಕನ್ನಡ ಪಾಠಶಾಲೆಯ ದುರಸ್ತಿ ಕಾರ್ಯದ ವಿವರಣೆ ನೀಡಿದರು .

ಕಾರ್ಯಕ್ರಮದಲ್ಲಿ ಯು.ಎ.ಇಯಲ್ಲಿರುವ ಎಲ್ಲ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳಾದ ಎಂ.ಇ. ಮೂಳೂರು , ಗೋವಿಂದ ನಾಯ್ಕ್ , ಇದಾಯತ್ ಅಡ್ಡುರ್,  ಮಲ್ಲಿಕಾರ್ಜುನ ಗೌಡ , ಗೋಪಾಲಕೃಷ್ಣ ಸಾಲಿಯಾನ್ , ಡಾ. ರಶ್ಮಿ ನಂದಕಿಶೋರ್ , ಮಲ್ಲಿಕಾರ್ಜುನ ಅವಲ್ದಾರ್ , ಸುದೀಪ್  ಹಾಗೂ ಯಮುನಾ ಮನೋಜ್ ಸೇರಿದಂತೆ ಇತರ ಪದಾಧಿಕಾರಿಗಳು  ಪಾಲ್ಗೊಂಡಿದ್ದರು .ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ  ಕಾರ್ಯಕ್ರಮಗಳು  ನೋಡುಗರ ಮನಸೆಳೆದವು . 

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಕಾವ್ಯ ಯುವರಾಜ್ ನಡೆಸಿ ಕೊಟ್ಟರು  . ಎಲ್ಲ ಅತಿಥಿಗಳನ್ನು  ಕನ್ನಡ ಮಿತ್ರರು ಸಂಘಟನೆಯ ಸಂಘಟನಾ ಕಾರ್ಯದರ್ಶಿ ಶ್ರೀ. ವಿನಯ್ ಕುಮಾರ್ ಸ್ವಾಗತಿಸಿದರೆ , ಮಾಧ್ಯಮ ಸಂಚಾಲಕರಾದ ಶ್ರೀ. ಬಾನುಕುಮಾರ್ ವಂದನಾರ್ಪಣೆ ಮಾಡಿದರು . 

ಆನ್ಲೈನ್ನಲ್ಲಿ ನಡೆದ ಈ ಕಾರ್ಯಕ್ರಮದ ನೇರ ಪ್ರಸಾರ  ಕನ್ನಡ ಮಿತ್ರರು ಯುಎಇ ರವರ ಸಾಮಾಜಿಕ ಜಾಲತಾಣಗಳಲ್ಲಿ ಹಾಗು  ಕೆಲ ಡಿಜಿಟಲ್ ಮಾಧ್ಯಮಗಳ  ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡುವ ಮೂಲಕ ಪ್ರಪಂಚದಾದ್ಯಂತ ಕನ್ನಡಿಗರು  ಈ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. 

 ಈ ಕರೋನ ಮಹಾಮಾರಿಯಿಂದ ಮಕ್ಕಳ  ವಿದ್ಯಾಭ್ಯಾಸಕ್ಕೆ ಧಕ್ಕೆಯಾಗಿರುವ ಈ ಸಂದರ್ಭದಲ್ಲಿ“ ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು “ಎಂಬ  ಘೋಷಣೆಯೊಂದಿಗೆ  ಉಚಿತವಾಗಿ  ದೂರದ ದುಬೈನಲ್ಲಿ  ,  ಕನ್ನಡ ಕಲಿಸುತ್ತಿರುವ ಕನ್ನಡ ಮಿತ್ರರು ಸಂಘಟನೆ ಎಲ್ಲರಿಗೂ ಮಾದರಿ.

ಜಾಹೀರಾತು




Post a Comment

0 Comments