ದುಬೈಯಲ್ಲಿ ಕಾಂತರ ಸಿನಿಮಾದ 50ನೇ ದಿನಾಚರಣೆ | ರಿಷಬ್ ಶೆಟ್ಟಿಗೆ "ಕನ್ನಡ ಸಿರಿ" ಬಿರುದು ಪ್ರದಾನ

 


ಯುಎಇ: ಓವರ್ಸೀಸ್ ಮೂವೀಸ್ ಗಲ್ಫ್ (OMG) ನ ವತಿಯಿಂದ  ಕಾಂತರ ಸಿನಿಮಾದ 50 ನೇ ದಿನದ ವಿಶೇಷ ಕಾರ್ಯಕ್ರಮದೊಂದಿಗೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.

ನಗರದ ದೇರಾ ಹಯಾತ್ ನ ಗ್ಯಾಲರಿಯ ಸಿನಿ ಮಂದಿರದಲ್ಲಿ ನ.18 ರಂದು ಸಂಜೆ ಕಾಂತರ ಸಿನಿಮಾದ 50ನೇ ದಿನದ ಸಂಭ್ರಮವನ್ನು ಕಾಂತರ ಸಿನಿಮಾದ ವಿಶೇಷ ಪ್ರದರ್ಶನದ ಮೂಲಕ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಂತರ ಚಿತ್ರದ ನಾಯಕ ,ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ರಿಷಬ್ ಶೆಟ್ಟಿ ಭಾಗಿಯಾಗಿದ್ದರು.

"ಕನ್ನಡ ಸಿರಿ" ಬಿರುದು ಪ್ರದಾನ


ಓವರ್ಸೀಸ್ ಮೂವೀಸ್ ಗಲ್ಷ್ ನ ವತಿಯಿಂದ ರಿಷಬ್ ಶೆಟ್ಟಿಯವರಿಗೆ ಬೆಳ್ಳಿಯ ಖಡ್ಗವನ್ನು ಕೈಗೆ ಹಾಕಿ "ಕನ್ನಡ ಸಿರಿ" ಬಿರುದು ನೀಡಿ ಮೈಸೂರು ಪೇಟ ತೊಡಿಸಿ ಗೌರವಿಸಲಾಯಿತು. 


ಶ್ರೀಮತಿ ಪ್ರಗತಿ ರಿಷಬ್ ಶೆಟ್ಟಿಯವರನ್ನು OMG ಮಹಿಳಾ ಸದಸ್ಯೆಯರು ಬೆಳ್ಳಿಯ ದೇವರ ದೀಪ ನೀಡಿ ಶಾಲು ಹೊದಿಸಿ ಗೌರವಿಸಿದರು. ವೇದಿಕೆಯಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಎನ್.ಆರ್.ಐ. ಫೋರಂನ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡ ತುಳು ಚಿತ್ರ ನಿರ್ಮಾಪಕರು ಉದ್ಯಮಿ ಹರೀಶ್ ಶೇರಿಗಾರ್,OMG ತಂಡದ ಸ್ಥಾಪಕ ಸದಸ್ಯರಾದ ಸೆಂಥಿಲ್ ಬೆಂಗಳೂರು, ಮಲ್ಲಿಕಾರ್ಜುನ ಗೌಡ,ಈಶ್ವರೀದಾಸ್ ಶೆಟ್ಟಿ, ಶಶಿಧರ್ ನಾಗರಾಜಪ್ಪ ಉಪಸ್ಥಿತರಿದ್ದರು.


ಸಿನಿಮಾದ 50ನೇ ದಿನದ ಸಂಭ್ರಮವನ್ನು ಗಣ್ಯರೊಂದಿಗೆ ರಿಷಬ್ ಶೆಟ್ಟಿ ದಂಪತಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು.

ರಿಷಬ್ ಶೆಟ್ಟಿ ಪ್ರತಿಕ್ರಿಯೆ :

 


ನಮ್ಮ ನಾಡಿನ ಸಂಸ್ಕೃತಿ ,ಆಚಾರ ವಿಚಾರಗಳನ್ನು ಬಿಂಬಿಸುವ ಚಿತ್ರವನ್ನು ಕರುನಾಡಿಗೆ ಕೊಟ್ಟಿದ್ದೆನೆ.ಅದನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು ಜನರು ಅವರಿಗೆ ಹಾಗೂ ಇಂದು ನನಗೆ "ಕನ್ನಡ ಸಿರಿ" ಬಿರುದು ನೀಡಿದ OMG ತಂಡಕ್ಕೆ ಅಭಿನಂದನೆಗಳು.ಈಗ ಚಿತ್ರ ಮುನ್ನೂರಕ್ಕೂ ಅಧಿಕ ದೇಶ ವಿದೇಶದಲ್ಲಿ ಚಿತ್ರ ಮಂದಿರಗಳಲ್ಲಿ 50 ನೇ ದಿನದ ಚಿತ್ರ ಪ್ರದರ್ಶನಗೊಳ್ಳುತ್ತ ಇದೆ.  ನಾನು ಪ್ರಗತಿ ಸರಿಯಾಗಿ‌ ಪ್ರೆಕ್ಷಕರೊಂದಿಗೆ ಕುಳಿತು ಚಿತ್ರವನ್ನು ನೋಡಿಲ್ಲ ಇಂದು ಯು.ಎ.ಇ.ಯ ಕನ್ನಡಿಗರೊಂದಿಗೆ  ನೋಡುವ ಸೌಭಾಗ್ಯ ಸಿಕ್ಕಿದೆ. ಇನ್ನೂ ಮುಂದೆಯೂ ಒಳ್ಳೆಯ ಸಿನಿಮಾವನ್ನು ಮಾಡಲಿಕ್ಕೆ ಪ್ರಯತ್ನ ಪಡುತ್ತೇನೆ ನಿಮ್ಮ ಎಲ್ಲರ ಆರ್ಶಿವಾದ ನಮ್ಮ ತಂಡದ ಮೇಲೆ ಇರಲಿ ಎಂದರು.


OMG ತಂಡದ ಮಹಿಳಾ ಸದಸ್ಯೆಯರಾದ ಶ್ರೀಮತಿ ಮಮತ ಸೆಂಥಿಲ್,ಶ್ರೀಮತಿ ರೂಪ ಶಶಿಧರ್,ಶ್ರೀಮತಿ ಸ್ನೇಹಲ್ ಈಶ್ವರೀದಾಸ್ ಶೆಟ್ಟಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರೀದಾಸ್ ಶೆಟ್ಟಿಯವರು ಅತ್ಯಾಕರ್ಷಕವಾಗಿ ಕಾರ್ಯಕ್ರಮ ನಿರೂಪಿಸಿದರು. ಶಶಿಧರ್ ನಾಗರಾಜಪ್ಪ ಸ್ವಾಗತಿಸಿ,ಸೆಂಥಿಲ್ ಬೆಂಗಳೂರು ಧನ್ಯವಾದವಿತ್ತರು.ನಂತರ ಕಾಂತರ ಸಿನಿಮಾ ಪ್ರದರ್ಶನಗೊಂಡಿದ್ದು ನೂರಾರು ಪ್ರೇಕ್ಷಕರು ವೀಕ್ಷಿಸಿ ಪ್ರಶಂಸಿದರು.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Post a Comment

0 Comments