ತಲಪ್ಪಾಡಿ ಸುಂಕ ವಸೂಲಿ- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾರತಮ್ಯ ನೀತಿಯನ್ನು ವಿರೋಧಿಸಿ ಯು.ಡಿ.ಎಫ್ ನಿಂದ ಸಂಜೆ ಧರಣಿ


ಮಂಜೇಶ್ವರ: ತಲಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಾಗ ಮಂಜೇಶ್ವರ ಗ್ರಾಮ ಪಂಚಾಯಿತಿ ನಿವಾಸಿಗಳಿಂದ ಸುಂಕ ವಸೂಲಿ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ತಾರತಮ್ಯ ನೀತಿಯನ್ನು ವಿರೋಧಿಸಿ ಮಂಜೇಶ್ವರ ಪಂಚಾಯಿತಿ ಯು.ಡಿ.ಎಫ್ ಸಮಿತಿಯು ತಲಪ್ಪಾಡಿ ಗಡಿಯಲ್ಲಿ ಸಂಜೆ ಧರಣಿ ನಡೆಸಿತು. ಯು.ಡಿ.ಎಫ್ ಅಧ್ಯಕ್ಷ ಯು.ಕೆ.ಸೈಫುಲ್ಲ ತಂಗಳವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಟೋಲ್ ಬೂತಿನ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲಾ ಜನರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕೆಂದು ಶಾಸಕರು ಒತ್ತಾಯಿಸಿದರು. ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕ ರಾಜ್ಯ ಯೂತ್ ಲೀಗ್ ಅಧ್ಯಕ್ಷ ಸಿದ್ದೀಕ್ ತಲಪ್ಪಾಡಿ ಮುಖ್ಯ ಭಾಷಣ ಮಾಡಿದರು.ಯು.ಡಿ.ಎಫ್ ಮುಖಂಡರಾದ ಇರ್ಷಾದ್ ಮಂಜೇಶ್ವರ, ಮುಖ್ತಾರ್, ರಂಜಿತ್, ಮುಸ್ತಫಾ ಉದ್ಯಾವರ, ಪಿ.ಎಚ್.ಅಬ್ದುಲ್ ಹಮೀದ್, ಕೆ.ಎಂ. ಅಬ್ದುಲ್ ಖಾದರ್, ಯು.ಎ.ಖಾದರ್, ಹನೀಫ್ ಕೂಚಿಕ್ಕಾಡ್, ಜಕರಿಯ ಶಾಲಿಮಾರ್ ' ರಿಯಾಝ್ ಮೌಲಾನಾ ರೋಡ್, ಅಬ್ದುಲ್ ಲತೀಫ್ ಬಾಬಾ, ಇರ್ಫಾನ್ ಇರ್ಷಾದ್, ಮುಮ್ತಾಝ್ ಸಮೀರ ಮಾತನಾಡಿದರು. ಯು.ಡಿ.ಎಫ್ ಸಂಚಾಲಕ ಶಾಫಿ ಮಾಸ್ತರ್ ಬರುವ ಸ್ವಾಗತಿಸಿ, ಅಬ್ದುಲ್ಲ ಕಜೆ ವಂದಿಸಿದರು.

Post a Comment

0 Comments