ಪೆರ್ಲ: ಅಡ್ಯನಡ್ಕ ಸಮೀಪದ ಎಣ್ಮಕಜೆ ಗ್ರಾಮ ಪಂಚಾಯತಿನ 1ನೇ ವಾರ್ಡಿಗೊಳಪಟ್ಟ ಸಾಯ ಶಾಲೆಯ ಹತ್ತಿರದ ಗುಳಿಗ ಮೂಲೆ ನಿವಾಸಿ ನಾರಾಯಣ ನಾಯ್ಕ್ ಎಂಬವರ ಪುತ್ರ ಜಿತೇಶ್ (16) ಕರೆಂಟ್ ಶಾಕ್ ತಗುಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಸೋಮವಾರ ಸಂಜೆ ಈ ದುರ್ಘಟನೆ ನಡೆದಿದೆ.
ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಪ್ಲಸ್ ವನ್ ವಿದ್ಯಾರ್ಥಿಯಾಗಿರುವ ಈತನಿಗೆ ತೋಟದ ಮೋಟರ್ ಶೆಡ್ ಬಳಿ ಕರೆಂಟ್ ಶಾಕ್ ತಗುಲಿದ್ದು ತಕ್ಷಣ ಮನೆ ಹಾಗೂ ಊರವರು ಸೇರಿ ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಫಲಕಾರಿಯಾಗಲಿಲ್ಲ ಎಂದು ತಿಳಿದು ಬಂದಿದೆ. ನಿನ್ನೆ ಸಂಜೆ ಮನೆಯ ಬಳಿಯ ಪಂಪ್ ಶೆಡ್ ನಲ್ಲಿ ಈ ಘಟನೆ ನಡೆದಿದೆ. ಪಂಪ್ ಆಫ್ ಮಾಡಲು ಬಂದಾಗ ಶಾಕ್ ತಗುಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಸ್ಥಳೀಯರು ಜಿತೇಶ್ ನನ್ನು ವಿಟ್ಲ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮೃತನು ತಂದೆ ನಾರಾಯಣ ನಾಯ್ಕ, ತಾಯಿ ಪದ್ಮಾವತಿ ಎಂಬಿವರನ್ನು ಅಗಲಿದ್ದಾರೆ. ಈತನ ಓರ್ವ ಸಹೋದರಿ ಹರಿಣಾಕ್ಷಿ ಈ ಹಿಂದೆಯೇ ಮೃತಪಟ್ಟಿದ್ದರು.
ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಪಂಚೆನಾಮೆ ನಡೆಸಲಾಗಿದ್ದು ಈತನ ಅಕಾಲಿಕ ಸಾವಿಗೆ ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಪ್ರಾಂಶುಪಾಲರು, ಉಪನ್ಯಾಸಕರು,ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ವೃಂದ ಸಂತಾಪ ವ್ಯಕ್ತಪಡಿಸಿದ್ದಾರೆ



0 Comments