ಯ.ಎ.ಇ: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (ರಿ) ಮತ್ತು ಕನ್ನಡಿಗರು ದುಬಾಯಿ ಇವರ ಸಂಯುಕ್ತ ಆಶ್ರಯದಲ್ಲಿ ಅರಬ್ಬರ ನಾಡಿನಲ್ಲಿ ನಡೆಯಲಿರುವ ವಿಶ್ವ ಕನ್ನಡ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಫ್, ಕನ್ನಡಿಗರು ದುಬಾಯಿ ಹಾಗೂ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ಅಧ್ಯಕ್ಷರಾದ ಸದನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.
ಈ ಸಭೆಯಲ್ಲಿ ಛಾಯಾದೇವಿ ಕೃಷ್ಣ ಮೂರ್ತಿ , ರೋನಾಲ್ಡ್ ಮಾರ್ಟಿನ್ ಮತ್ತು ಅಡ್ವೊಕೇಟ್ ಕಲಿಲ್ ಇವರನ್ನು ಕನ್ನಡಿಗರು ದುಬಾಯಿ ಇದರ ಮುಖ್ಯ ಸಲಹೆಗಾರರಾಗಿ ಹಾಗೂ ಪುಟ್ಟರಾಜ ಗೌಡ, ಅಶ್ವತ್ ಬಾಬು, ಸತೀಶ್ ಹಂಗಳೂರು ಇವರನ್ನು ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು.
ಕನ್ನಡಿಗರು ದುಬಾಯಿ ಪ್ರತಿ ವರ್ಷದಂತೆ ನೀಡುವ ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿಯನ್ನು ಶ್ರೀಯಧುವೀರ ಮಹಾರಾಜ ಒಡೆಯರ್ ಇವರಿಗೆ ನೀಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು ಮತ್ತು ಕನ್ನಡಿಗರು ದುಬಾಯಿ ಈ ವರ್ಷದಿಂದ ವಿಶೇಷವಾಗಿ ಡಾ.ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡದ ಸೇವೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು ಈ ವರ್ಷ ಈ ಪ್ರಶಸ್ತಿಗೆ ಬಾಹೈನ್ ಕನ್ನಡ ಸಂಘಕ್ಕೆ ನೀಡಲು ಎಲ್ಲರೂ ಸಮ್ಮತದಿಂದ ತೀರ್ಮಾನಿಸಲಾಯಿತು.
ಇನ್ನೂ ಅರಬ್ಬರ ನಾಡಿನಲ್ಲಿ ಕಳೆಕಟ್ಟುತ್ತಿರುವ ವಿಶ್ವ ಕನ್ನಡ ಹಬ್ಬ ಇದರ ಬಗ್ಗೆ ಚರ್ಚಿಸಿ ಕಾರ್ಯಕ್ರಮಕ್ಕೆ ಸ್ವಯಂಸೇವಕ ಸಮಿತಿಗಳನ್ನು ರಚಿಸಲಾಯಿತು.
ನ.19 ರಂದು ನಗರದ ಶೇಖ್ ರಷೀದ್ ಆಡಿಟೋರಿಯಂನಲ್ಲಿ ಬೆಳಿಗ್ಗೆಯಿಂದ ರಾತ್ರಿಯ ವರೆಗೆ ನಡೆಯುವ ವಿಶ್ವ ಕನ್ನಡ ಹಬ್ಬದ ಯಶಸ್ಸಿಗೆ ಅನಿವಾಸಿ ಕನ್ನಡಿಗರಲ್ಲಿ ಸಹಕಾರ ಮತ್ತು ಪ್ರೋತ್ಸಾಹ ಕೋರಲಾಯಿತು. ಸಭೆಯಲ್ಲಿ ಕನ್ನಡಿಗರು ದುಬೈಯ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ,ಅರುಣ್ ಕುಮಾರ್, ವೆಂಕಟರಮಣ ಕಾಮತ್,ದೀಪಕ್ ಸೋಮಶೇಖರ್ ಉಪಸ್ಥಿತರಿದ್ದರು.


0 Comments