ಪೆರ್ಲ: "ಕೋರೋನ ಸಂದರ್ಭದಿಂದ ಮಕ್ಕಳ ಶಿಕ್ಷಣ ಕ್ರಮಗಳು ಅವ್ಯವಸ್ಥಿತವಾಗಿದ್ದು ಈಗಷ್ಟೆ ಸುವ್ಯವಸ್ಥೆಗೆ ಮರಳುವ ನಡುವೆ ಪೋಷಕರ ಆತಂಕಗಳನ್ನು ದೂರೀಕರಿಸಲು ಮಕ್ಕಳಿಗೆ ಟ್ಯೂಷನ್ ಗಳು ಅತ್ಯಾವಶ್ಯಕವಾಗಿದೆ. ನಾಲ್ದೆಸೆಗಳ ಗ್ರಾಮೀಣ ಪ್ರದೇಶ ಕೇಂದ್ರೀಕರಿಸಿ ಪೆರ್ಲ ಪೇಟೆಯಲ್ಲಿ ಆರಂಭಿಸಿದ ಟ್ಯೂಷನ್ ತರಗತಿ ಆಶಾದಾಯಕವಾಗಿ ವಿದ್ಯಾರ್ಥಿಗಳ ಬದುಕಿಗೆ ಉಜ್ವಲ ಬೆಳಕು ಚೆಲ್ಲಲಿ" ಎಂದು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಭಿಪ್ರಾಯಪಟ್ಟರು.
ಅವರು ಸೋಮವಾರ ಪೂರ್ವಾಹ್ನ ಪೆರ್ಲದ ಪಡ್ರೆ ಸಭಾ ಭವನದಲ್ಲಿ ನಡೆದ ಹೊಂಬೆಳಕು ಟ್ಯೂಷನ್ ಸೆಂಟರನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ.ಸದಸ್ಯೆ ರಮ್ಲ ಸಭೆಯ ಅಧ್ಯಕ್ಷತೆವಹಿಸಿದ್ದರು. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಲ ಘಟಕಾಧ್ಯಕ್ಷ ಟಿ.ಪ್ರಸಾದ್, ಗಣೇಶ್ ಕಾಂಪ್ಲೆಕ್ಸ್ ಪಾಲುದಾರ ರಾಮ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಎಣ್ಮಕಜೆ ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ನಿವೃತ್ತ ನೊಂದಾವಣಾಧಿಕಾರಿ ಮುಹಮ್ಮದಾಲಿ ಪೆರ್ಲ, ಸಾಮಾಜಿಕ ಮುಂದಾಳು ಪ್ರಕಾಶ್ ರೈ ಕುದ್ವ, ಹೊಂಬೆಳಕು ಟ್ಯೂಷನ್ ಸೆಂಟರ್ ಕೋರ್ಡಿನೇಟರ್ ಬಾಲಕೃಷ್ಣ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರದ ಪ್ರಾಂಶುಪಾಲ ಡಾ.ಕಿಶೋರ್ ರೈ ಶೇಣಿ ಸ್ವಾಗತಿಸಿ ಪ್ರಸೀದಾ ವಂದಿಸಿದರು. ಎಸ್.ಎನ್. ಭಟ್ ಸೈಪಂಗಲ್ಲು ನಿರೂಪಿಸಿದರು.
ಚಿತ್ರ : ಸಂದೀಪ್ ಪೆರ್ಲ
ಜಾಹೀರಾತು




0 Comments