ದುಬಾಯಿ ಯಕ್ಷೋತ್ಸವ 2024 ಮುಹೂರ್ತದ ಗೆಜ್ಜೆಪೂಜೆ


ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಆಶ್ರಯದಲ್ಲಿ ಜೂನ್ 9ರಂದು ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ ನಡೆಯಲಿರುವ,"ದುಬಾಯಿ ಯಕ್ಷೋತ್ಸವ 2024" ಅದ್ದೂರಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ತೊಡಗಿಸುವಿಕೆಯ ಅಂಗವಾಗಿ ವರ್ಷಂಪ್ರತಿಯಂತೆ ಮುಹೂರ್ತ ಪೂಜೆ - ಗೆಜ್ಜೆ ಸೇವೆ ವಕ್ವಾಡಿ ಪ್ರವೀಣ್ ಶೆಟ್ಟಿ ಮಾಲಕತ್ವದ, ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಸಭಾಂಗಣದಲ್ಲಿ, ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದಿಂದ ವೈಶಿಷ್ಟಪೂರ್ಣ ಕಾರ್ಯಕ್ರಮವಾಗಿ ನೆರವೇರಿತು. ಲಕ್ಷ್ಮೀಕಾಂತ್ ಭಟ್ ಇವರ ನೇತೃತ್ವದಲ್ಲಿ ಸಂತೋಷ್ ಭಟ್ ಎರ್ಮಾಳ್,  ವೆಂಕಟೇಶ್ ಶಾಸ್ತ್ರಿ ಪುತ್ತಿಗೆ, ಭವಾನಿಶಂಕರ ಶರ್ಮ ಅರ್ಚಕರ ತಂಡದವರು ಪೂಜಾ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಿಕೊಟ್ಟರು. ಪೂಜಾ ಸಂಕಲ್ಪ ಮತ್ತು ದೀಪ ಬೆಳಗುಸುವಿಕೆಯಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ರಘು ಪೂಜಾರಿ ಮತ್ತು ರಾಜೇಶ್ ಕುತ್ತಾರು ನೇತೃತ್ವದಲ್ಲಿ ತಂಡದ ಹಿರಿ- ಕಿರಿಯ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.  ಅಲ್ಲದೆ ಸಾಮೂಹಿಕ ರಾಮ ರಕ್ಷಾ ಸ್ತೋತ್ರ ಪಠಣ ಮಾಡಲಾಯಿತು. 


ಶರತ್ ಕುಡ್ಲ‌ ಅವರ ನಿರೂಪಣೆಯಲ್ಲಿ, ಶ್ರೀಮತಿ ಭವ್ಯಶ್ರೀ ಕುಲ್ಕುಂದ ಅವರಲ್ಲಿ ಭಾಗವತಿಕೆ ಅಭ್ಯಾಸ ಮಾಡುತ್ತಿರುವ ಕೇಂದ್ರದ ವಿದ್ಯಾರ್ಥಿಗಳಾದ ಕುಮಾರಿಯರಾದ ವೈಷ್ಣವಿ ಮನೋಹರ್ ಪದ್ಮಶಾಲಿ, ಶರಣ್ಯ ವೇದವ್ಯಾಸ, ಶರಣ್ಯ ಭಾಸ್ಕರ ಸಾಲ್ಯಾನ್, ಶ್ರೀಶ ಪ್ರಭಾಕರ ಪೂಜಾರಿ, ಐಶಾನಿ ದೀಪಕ್ ಸುಳ್ಯ, ನಯೋಮಿ ಸಾಯಿನಾಥ ಶೆಟ್ಟಿ, ಶ್ರೀನಿಕಾ ರಮಾನಂದ ಶೆಟ್ಟಿ, ದೇವರ ಎದುರು ಪೂರ್ವರಂಗದ ಹಾಡುಗಳನ್ನು ಪ್ರಸ್ತುತ ಪಡಿಸಿದರು.


 ಗಣಪತಿ ಸ್ತುತಿ- ಮುಹೂರ್ತಪೂಜೆಯ ನಂತರ ಪ್ರಸಂಗಭ್ಯಾಸಾರಂಭ ಮತ್ತು ಎಲ್ಲಾ ವಿದ್ಯಾರ್ಥಿಗಳು ಮತ್ತು ಕಲಾವಿದರು ಗೆಜ್ಜೆ ಸೇವೆ - ರಂಗಪ್ರವೇಶ ಮಾಡಿ ನೂತನ ಪ್ರಸಂಗಭ್ಯಾಸಕ್ಕೆ ಚಾಲನೆ ನೀಡಿದರು.

 


ಹಿಮ್ಮೇಳ ದಲ್ಲಿ , ಕೃಷ್ಣಪ್ರಸಾದ್ ರಾವ್ ಸುರತ್ಕಲ್, ಶರತ್ ಕುಡ್ಲ, ವೆಂಕಟೇಶ ಶಾಸ್ತ್ರಿ ಪುತ್ತಿಗೆ, ಭವಾನಿಶಂಕರ ಶರ್ಮ, ಆದಿತ್ಯ ದಿನೇಶ ಶೆಟ್ಟಿ, ಬಾಲಕೃಷ್ಣ ಶೆಟ್ಟಿಗಾರ್, ಗಿರೀಶ್ ನಾರಾಯಣ ಮೊದಲಾದ ಕೇಂದ್ರದ ಸದಸ್ಯರು ಸಹಕರಿಸಿದರು.

ಬಳಿಕ‌ ನಡೆದ ಶುಭಾಶಂಸನಾ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ,  ಉದ್ಯಮಿಗಳೂ - ಕಲಾಪೋಷಕರೂ ಆದ ಯುಎಇ,ಯ ಆಢ್ಯ ಮಹನೀಯರಾದ, ಹರೀಶ ಬಂಗೇರ, ಸತೀಶ ಪೂಜಾರಿ, ರಮಾನಂದ ಶೆಟ್ಟಿ, ಸುಧಾಕರ ರಾವ್ ಪೇಜಾವರ, ವರದರಾಜ ಶೆಟ್ಟಿಗಾರ್, ವಿಶ್ವನಾಥ ಶೆಟ್ಟಿ, ರಾಜೇಶ್ ಕುತ್ತಾರು, ವಾಸುಶೆಟ್ಟಿ, ಜಯಾನಂದ ಪಕ್ಕಳ, ದಯಾನಂದ ಹೆಬ್ಬಾರ್, ಪದ್ಮನಾಭ ಕಟೀಲು ಮೊದಲಾದವರು,  ಕೇಂದ್ರದ ವತಿಯ ಗೌರವಾರ್ಪಣೆ ಸ್ವೀಕರಿಸಿ ಇದೇ ಬರುವ ಜೂನ್ 9, 2024 ರಂದು ಶೇಖ್ ರಶೀದ್ ಅಡಿಟೋರಿಯಂನಲ್ಲಿ ಜರಗಲಿರುವ ದುಬಾಯಿ ಯಕ್ಷೋತ್ಸವ 2024 ಕ್ಕೆ ಶುಭಕೋರಿ ಕಾರ್ಯಕ್ರಮಕ್ಕೆ ತಮ್ಮ ಸರ್ವ ಬೆಂಬಲ‌ ವ್ಯಕ್ತಪಡಿಸಿದರು. ಕೇಂದ್ರದ  ಹಿರಿಯ ಕಲಾವಿದರಾದ ವೆಂಕಟೇಶ ಶಾಸ್ತ್ರಿ ಪುತ್ತಿಗೆ, ಭವಾನಿಶಂಕರ ಶರ್ಮ, ವೇದಿಕೆಯಲ್ಲಿ ಅತಿಥಿಗಳೊಂದಿಗೆ ಉಪಸ್ಥಿತರಿದ್ದು ಕಾರ್ಯಕ್ರಮ- ಪ್ರಸಂಗಗಳ ಮುನ್ನೋಟದ ಮಾತುಗಳನ್ನಾಡಿದರು. ಕೇಂದ್ರದ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ಕಾರ್ಯಕ್ರಮದ ರೂಪುರೇಷೆಗಳನ್ನು ಸಭೆಯ ಮುಂದಿಟ್ಟರು. 

ಅಭ್ಯಾಸ ಕೇಂದ್ರದ ಸರ್ವ ಸಂಚಾಲಕರಾದ  ಕೊಟ್ಟಿಂಜ ದಿನೇಶ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ‌ ನಿರ್ವಹಿಸಿ, ಧನ್ಯವಾದ ಸಮರ್ಪಣೆ ಮಾಡಿದರು. 

ಅಭ್ಯಾಸ ಕೇಂದ್ರದ ಹಿತೈಷಿಗಳಾದ ಸರ್ವಮಾನ್ಯ , ಧನಂಜಯ ಕಿನ್ನಿಗೋಳಿ, ಶರತ್ ಸರಳಾಯ, ಕಿರಣ್ ಪೂಜಾರಿ, ರಾಜರಾಜೇಶ್ವರಿ ಭಾಜನಾ ತಂಡದ ದಿನೇಶ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಉದ್ದಕ್ಕೂ ಉಪಸ್ಥಿತರಿದ್ದು ಶುಭ ಹಾರೈಸಿದರು.  ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಿತು. 




 ತುಂಬಿದ ಸಭಾಂಗಣದಲ್ಲಿ ಸಮವಸ್ತ್ರದಲ್ಲಿ ಶೋಭಿಸಿದ ವಿದ್ಯಾರ್ಥಿಗಳು ಮತ್ತು ಕಲಾವಿದರು, ಹೆತ್ತವರು ಮತ್ತು ಕಾರ್ಯಕರ್ತರ ತಂಡ, ಶಿಸ್ತುಬದ್ಧ ಕಾರ್ಯಕ್ರಮ ಆಯೋಜನೆಯ ಸರ್ವಾಂಗಗಳಲ್ಲೂ ಸಹಕರಿಸಿ, ನೆರೆದ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾದರು.ನೆರೆದ ದುಬಾಯಿಯ ಕಲಾಭಿಮಾನಿಗಳು, ಕಲಾಪೋಷಕರು ಈ ವೈಭವೋಪೇತ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವರ್ಷಂಪ್ರತಿ ಕೇಂದ್ರದ  ಕಾರ್ಯಕ್ರಮಗಳನ್ನು ಕಲಾಪ್ರಿಯರಿಗೆ ತಲುಪಿಸುವ ಮಾಧ್ಯಮ‌ ಪ್ರತಿನಿಧಿಗಳಾದ  ರಮೇಶ್ ಸುವರ್ಣ ಮತ್ತು ಪ್ರಶಾಂತ್ ನಾಯರ್, ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್, ಸಂತೋಷ್ ಶೆಟ್ಟಿ ಪೊಳಲಿ, ಕರಾವಳಿ ಕಸಿನ್ಸ್, ದುಬೈ ಲೋಕು, ಮಹೇಶ್ ಪುತ್ರನ್,ಛಾಯಾಗ್ರಾಹಕ ಶ್ರೀ ನಾಗೇಶ್ ಸರಳಾಯ ಮೊದಲಾದವರಿಗೆ ಮುಹೂರ್ತ ಕಾರ್ಯಕ್ರಮದ ಭಾಗವಹಿಸುವಿಕೆ - ಪ್ರಚಾರಗಳಿಗಾಗಿ ಧನ್ಯವಾದ ಸಮರ್ಪಿಸಲಾಯಿತು.

ಚಿತ್ರ : ನಾಗೇಶ್ ಸರಳಾಯ


Add


Post a Comment

0 Comments