ಬದಿಯಡ್ಕ:'ರಕ್ಷಾ ಬಂಧನವು ಸಾಹೋದರ್ಯ ಬೆಸೆಯುವ ಜತೆಗೆ ಸಮಾನತೆ, ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಪ್ರತಿನಿಧಿಸುತ್ತದೆ. ಈ ಹಬ್ಬದಿಂದ ಮನಸುಗಳಲ್ಲಿ ಬಾಂಧವ್ಯ ಬೆಸೆಯುತ್ತದೆ' ಎಂದು ಹಾಸನದ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಸ್ಥಾಪಕಾಧ್ಯಕ್ಷೆ ಕಲಾವತಿ ಮಧುಸೂದನ ಹೇಳಿದರು. ಅವರು ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ಸೋಮವಾರ ನಡೆದ ರಕ್ಷಾ ಬಂಧನ ಹಾಗೂ ಸಂಸ್ಕೃತ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. 'ಮನೋವಿಕಾರಗಳನ್ನು ಅಳಿಸಿಕೊಂಡು, ಸಂಸ್ಕಾರ, ಸಂಸ್ಕೃತಿಯನ್ನು ವೃದ್ಧಿಗೊಳಿಸಬೇಕು.
ಈ ನಿಟ್ಟಿನಲ್ಲಿ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ದೊರಕುವಂತೆ ಮಾಡಬೇಕು' ಎಂದು ಹೇಳಿದರು. ಸ್ಪಂದನ ಸಿರಿ ವೇದಿಕೆಯ ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯ ಯೋಜನೆಗಳ ಬಗ್ಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಕೆ ವಾಮನ್ ರಾವ್ ಬೇಕಲ್ ಮಾತನಾಡಿ, 'ಸಂಸ್ಕಾರದ ಅರಿವಿನಿಂದ ಜ್ಞಾನವು ವಿಸ್ತಾರಗೊಳ್ಳುತ್ತದೆ. ಮಕ್ಕಳಲ್ಲಿ ಮಾನವೀಯತೆಯನ್ನು ಅರಳಿಸಲು ಧಾರ್ಮಿಕ ಆಚರಣೆಗಳು ಅನುಷ್ಠಾನ ಆಗಬೇಕು' ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕ ಪಂಜಿತ್ತಡ್ಕ ಸತ್ಯ ನಾರಾಯಣ ಶರ್ಮ ಮಾತನಾಡಿ,'ರಕ್ಷೆಯಲ್ಲಿ ಭಾವನಾತ್ಮಕ ಸಂಬಂಧವಿದೆ. ರಕ್ಷಣೆಯೆ ನಮಗೆ ಬಲವನ್ನು ನೀಡುತ್ತದೆ. ಅನ್ಯಾಯದ ವಿರುದ್ಧ ಹೋರಾಡಲು ಇದುವೇ ಶಕ್ತಿ' ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಕೃತ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ಸಂಸ್ಕೃತ ಭಾಷಣ, ಗೀತೆ ಹಾಗೂ ಪ್ರತಿಜ್ಞಾ ವಿಧಿಯನ್ನು ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ವ್ಯವಸ್ಥಾಪಕ ಜಯಪ್ರಕಾಶ ಪಜಿಲ, ಸಾಹಿತಿ ನರಸಿಂಹ ಭಟ್ ಏತಡ್ಕ, ಸಂಧ್ಯಾರಾಣಿ ಟೀಚರ್, ಶ್ರೀಲಕ್ಷ್ಮೀ ಇದ್ದರು. ಶಿಫಾಲಿ ರೈ ಸ್ವಾಗತಿಸಿದರು. ಅವನೀಶ್ ಶರ್ಮ ವಂದಿಸಿದರು. ನಿಹಾರಿಕ ನಿರೂಪಿಸಿದರು. ಮಕ್ಕಳೆಲ್ಲಾ ಪರಸ್ಪರ ರಕ್ಷೆಯನ್ನು ಕಟ್ಟಿ ಸಂಭ್ರಮಿಸಿದರು.




0 Comments